Sunday, August 16, 2026
Homeನಿಮ್ಮ ಜಿಲ್ಲೆದೇಶದ ಉಜ್ವಲ ಭವಿಷ್ಯಕ್ಕಾಗಿ ಸಂವಿಧಾನ, ಪ್ರಜಾಪ್ರಭುತ್ವ ರಕ್ಷಿಸಬೇಕು: ಬಿ.ಕೆ.ಹರಿಪ್ರಸಾದ್

ದೇಶದ ಉಜ್ವಲ ಭವಿಷ್ಯಕ್ಕಾಗಿ ಸಂವಿಧಾನ, ಪ್ರಜಾಪ್ರಭುತ್ವ ರಕ್ಷಿಸಬೇಕು: ಬಿ.ಕೆ.ಹರಿಪ್ರಸಾದ್

ಬೆಂಗಳೂರು, ಆ.9: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಬಿ.ಕೆ.ಹರಿಪ್ರಸಾದ್ ಅವರು ಧ್ವಜಾರೋಹಣ ನೆರವೇರಿಸುವ ಮೂಲಕ ಭಾರತೀಯ ಯುವ ಕಾಂಗ್ರೆಸ್‌ನ 66ನೇ ಸಂಸ್ಥಾಪನಾ ದಿನಾಚರಣೆಗೆ ವಿದ್ಯುಕ್ತ ಚಾಲನೆ ನೀಡಿದರು. 

ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ನಗರದ ಕೆಪಿಸಿಸಿ ಕಚೇರಿ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಭಾರತೀಯ ಯುವ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆಯಲ್ಲಿ ನೂರಾರು ಯುವಕರು, ವಿದ್ಯಾರ್ಥಿಗಳು 
ಬಿಳಿ ವಸ್ತ್ರ ಧರಿಸಿ ಪಾಲ್ಗೊಂಡಿದ್ದರು. ಈ ವೇಳೆ ದೇಶದ ಹಿತ, ವಿದ್ಯಾರ್ಥಿಗಳು ಮತ್ತು ಯುವಕರ ಸದೃಢ ಭವಿಷ್ಯಕ್ಕಾಗಿ ಶ್ರಮಿಸುವುದಾಗಿ ಯುವ ಕಾಂಗ್ರೆಸ್ ಪದಾಧಿಕಾರಿಗಳು ಶಪತಗೈದರು.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಬಿ.ಕೆ.ಹರಿರ್ಪಸಾದ್ ಮಾತನಾಡಿ, ” ಕ್ರಾಂತಿ ಜ್ಯೋತಿ ದಿನವೇ ಯುವ ಕಾಂಗ್ರೆಸ್ ಸ್ಥಾಪನೆಯಾಗಿದ್ದು, ರಾಷ್ಟ್ರಪ್ರೇಮ, ರಾಷ್ಟ್ರ ಭಕ್ತಿ ಮತ್ತು ರಾಷ್ಟ್ರ ಸೇವೆಗಳಿಂದ ಯುವಕರನ್ನು ಪ್ರೇರೇಪಿಸಲು ಯುವ ಕಾಂಗ್ರೆಸ್ ಸ್ಥಾಪಿಸಲಾಯಿತು. ಮಹಾತ್ಮ ಗಾಂಧಿಯವರು ‘ಬ್ರಿಟೀಷರೇ ಭಾರತ ಬಿಟ್ಟು ತೊಲಗಿ’ ಎಂಬ ಸಂದೇಶ ನೀಡಿ ಇಂದಿಗೆ 84 ವರ್ಷಗಳು ಕಳೆದಿವೆ. ಗುಲಾಮಗಿರಿ, ಶೋಷಣೆ, ಭಯ, ಬಡತನದಿಂದ ಮುಕ್ತರಾಗಿ ಜೀವನ ನಡೆಸಲು ಮಹಾತ್ಮ ಗಾಂಧಿ, ಜವಹರಲಾಲ್ ನೆಹರೂ, ಸರ್ದಾರ್ ವಲ್ಲಭಭಾಯಿ ಪಟೇಲ್ ಸೇರಿದಂತೆ ನಾನಾ ಮಹಾತ್ಮರು ಹೋರಾಟ ಮಾಡಿ ನಮಗೆ ಸ್ವಾತಂತ್ರ ನೀಡಿದ್ದಾರೆ,” ಎಂದು ತಿಳಿಸಿದರು.

“ದೇಶದ ಉಜ್ವಲ ಭವಿಷ್ಯ ಕಾಣಲು ದೇಶದ ಸ್ವಾತಂತ್ರ್ಯ, ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ರಕ್ಷಿಸಬೇಕು. ಜೊತೆಗೆ, ಯಾವುದೇ ದ್ವೇಷವಿಲ್ಲದ ಎಲ್ಲರೂ ಭಾರತೀಯರು ಎಂಬ ಭಾವನೆ ಮೂಡಿಸುವ ಜಾತ್ಯಾತೀತ ತತ್ತ್ವವನ್ನು ಪಾಲಿಸುವ ಮೂಲಕ ಮುನ್ನಡೆಯಬೇಕು,” ಎಂದು ಸೂಚಿಸಿದರು.

ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ ರಾಜ್ಯಾಧ್ಯಕ್ಷ ಎಚ್.ಎಸ್.ಮಂಜುನಾಥ್ ಮಾತನಾಡಿ, “ದೇಶದಲ್ಲಿ ಗುಲಾಮಗಿರಿ ಬೇಕೋ, ಸ್ವಾತಂತ್ರ್ಯ ಬೇಕೋ ಎಂಬ ಪರಿಸ್ಥಿತಿ ನಿರ್ಮಾಣವಾದಾಗ ನಮಗೆ ಸ್ವಾತಂತ್ರ್ಯ ಬೇಕು ಎಂದು ಹೇಳಿದ್ದು ಯುವಕರು. ಯುವಕರ ಶಕ್ತಿ ರಾಷ್ಟ್ರ ನಿರ್ಮಾಣಕ್ಕೆ ಬಳಕೆಯಾಗಬೇಕು ಎಂಬ ಉದ್ದೇಶದಿಂದ ಇಂದಿರಾ ಗಾಂಧಿಯವರು ಯುವ ಕಾಂಗ್ರೆಸ್ ಕಟ್ಟಿದ್ದಾರೆ. ದೇಶದ ನೊಂದವರು, ಶೋಷಿತರು, ಬಡವರು, ಅನ್ಯಾಯಕ್ಕೆ ಒಳಗಾಗುವವರ ಪರ ಯುವ ಕಾಂಗ್ರೆಸ್ ನಿಂತಿದೆ. ಮುಂದೆಯೂ ನಿಲಲಿದೆ,” ಎಂದು ಭರವಸೆ ನೀಡಿದರು.

“ದೇಶ-ರಾಜ್ಯವನ್ನಾಳಿದ ಬಹುತೇಕ ನಾಯಕರು ಯುವ ಕಾಂಗ್ರೆಸ್‌ನಿಂದ ಬಂದಿದ್ದು, ರಾಷ್ಟ್ರ ನಿರ್ಮಾಣದ ದೃಷ್ಟಿಯಲ್ಲಿ ಯುವ ಕಾಂಗ್ರೆಸ್ ಕೊಡುಗೆ ಅಪಾರ. ಯುವಕರು ಒಂದು ದಿನದ ಹೋರಾಟಕ್ಕೆ ಸೀಮಿತರಾಗದೆ ಪ್ರತಿದಿನವೂ ಧನಿಯಿಲ್ಲದವರಿಗೆ ಧನಿಯಾಗುತ್ತಾ, ಶೋಷಿತರ ಪರ ನಿಲ್ಲಬೇಕು. ದೇಶ ಕಟ್ಟುವ ವಿಚಾರದಲಿ ಸದಾ ಮುಂದಿರಬೇಕು. ದೇಶಕ್ಕೆ ನಾಡಿಗೆ ಬರಬಹುದಾದ ಆಪತ್ತುಗಳ ನಿವಾರಣೆಗೆ ಮೊದಲು ನಾವೇ ನಿಲ್ಲಬೇಕು,” ಎಂದು ಸೂಚಿಸಿದರು.

ಈ ವೇಳೆ ಕೆಪಿಸಿಸಿ ಕಾರ್ಯಕಾರಿ ಅಧ್ಯಕ್ಷರೂ ಆದ ಎಂ.ಎಲ್.ಸಿ‌. ಮಂಜುನಾಥ್ ಭಂಡಾರಿ, ಭಾರತೀಯ ಯುವ ಕಾಂಗ್ರೆಸ್ ರಾಷ್ಟ್ರೀಯ ಕಾರ್ಯದರ್ಶಿ ತಾರೀಖ್ ಬಾಗವಾನ್ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -spot_img

Most Popular

Recent Comments