ಸುರಪುರ: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಆಡಳಿತಾತ್ಮಕ ಚುರುಕುತನ ಹಾಗೂ ಪಕ್ಷದ ಸಂಘಟನಾತ್ಮಕ ಬಲವರ್ಧನೆಗೆ ಸಲುವಾಗಿ ಕಾಂಗ್ರೆಸ್ ಮುಖಂಡ ಶಾಂತಪ್ಪ ಮೇಸ್ತಕ ಅವರೊಂದಿಗೆ ಇತರ ಮುಖಂಡರಾದ ಲಕ್ಷ್ಮಣ್ಣ ನಾಯಕ ಮತ್ತು ಅಮರೇಶ ಕೋಳುರು ಜಗದೀಶಗೌಡ ಕೂಡ ದನಿಗೂಡಿಸಿದ್ದಾರೆ.
ಪ್ರಿಯಾಂಕ ಖರ್ಗೆಗೆ ಡಿಸಿಎಂ ಸ್ಥಾನಕ್ಕೆ ಬೇಡಿಕೆ:
ರಾಜ್ಯದಲ್ಲಿ ದಲಿತ, ಹಿಂದುಳಿದ ಹಾಗೂ ಶೋಷಿತ ಸಮುದಾಯಗಳ ಪ್ರಬಲ ಧ್ವನಿಯಾಗಿ ಗುರುತಿಸಿಕೊಂಡಿರುವ ಪ್ರಿಯಾಂಕ ಖರ್ಗೆ ಅವರಿಗೆ ಉಪಮುಖ್ಯಮಂತ್ರಿ ಸ್ಥಾನವನ್ನು ನೀಡಬೇಕೆಂದು ಒತ್ತಾಯಿಸಲಾಗಿದೆ. ಅವರಂತಹ ಕ್ರಿಯಾಶೀಲ ಹಾಗೂ ಯುವ ನಾಯಕನಿಗೆ ಉನ್ನತ ಜವಾಬ್ದಾರಿ ನೀಡುವುದರಿಂದ ರಾಜ್ಯದಲ್ಲಿ ಪಕ್ಷದ ವರ್ಚಸ್ಸು ಹೆಚ್ಚುವುದಲ್ಲದೆ, ತಳಮಟ್ಟದಲ್ಲಿ ಸಂಘಟನೆ ಬಲಗೊಳ್ಳಲಿದೆ ಎಂದು ಮುಖಂಡರು ಅಭಿಪ್ರಾಯಪಟ್ಟಿದ್ದಾರೆ.
ರಾಜಾ ವೇಣುಗೋಪಾಲ ನಾಯಕರಿಗೆ ಸಚಿವ ಸ್ಥಾನಕ್ಕೆ ಒತ್ತಾಯ:
ಸುರಪುರ ಕ್ಷೇತ್ರದ ಶಾಸಕರಾಗಿ ಯುವ ಮತ್ತು ಜನಪರ ನಾಯಕನಾಗಿ ಜನಪ್ರಿಯತೆ ಗಳಿಸಿರುವ ರಾಜಾ ವೇಣುಗೋಪಾಲ ನಾಯಕ ಅವರನ್ನು ಸಚಿವ ಸಂಪುಟಕ್ಕೆ ಸೇರ್ಪಡೆಗೊಳಿಸಬೇಕೆಂದು ಶಾಂತಪ್ಪ ಮೇಸ್ತಕ, ಲಕ್ಷ್ಮಣ್ಣ ನಾಯಕ ಮತ್ತು ಅಮರೇಶ ಕೋಳುರು ಆಗ್ರಹಿಸಿದ್ದಾರೆ. ಅವರ ಸೇವಾ ಮನೋಭಾವವನ್ನು ಕೇವಲ ಸುರಪುರ ಕ್ಷೇತ್ರಕ್ಕೆ ಸೀಮಿತಗೊಳಿಸದೆ, ರಾಜ್ಯದ ಅಭಿವೃದ್ಧಿಯಲ್ಲಿ ಬಳಸಿಕೊಳ್ಳುವ ಅವಕಾಶವನ್ನು ಸರ್ಕಾರ ಕಲ್ಪಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

ರಾಜಕೀಯ ಪರಂಪರೆ ಹಾಗೂ ನಿಷ್ಠೆಯ ಸ್ಮರಣೆ:
ಶಾಸಕ ರಾಜಾ ವೇಣುಗೋಪಾಲ ನಾಯಕ ಅವರ ಕುಟುಂಬದ ಕಾಂಗ್ರೆಸ್ ಬದ್ಧತೆಯನ್ನು ನೆನಪಿಸಿರುವ ಈ ನಾಯಕರು, ಅವರ ತಂದೆ ದಿವಂಗತ ರಾಜಾ ವೆಂಕಟಪ್ಪ ನಾಯಕ ಅವರು ಕಾಂಗ್ರೆಸ್ನಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿ ಪಕ್ಷದ ಏಳಿಗೆಗಾಗಿ ಶ್ರಮಿಸಿದ್ದರು ಎಂದು ಸ್ಮರಿಸಿದ್ದಾರೆ. ರಾಜಾ ವೆಂಕಟಪ್ಪ ನಾಯಕ ಅವರು ಶಾಸಕರಾಗಿ ಹಾಗೂ ಸಂಸದರಾಗಿ ಸೇವೆ ಸಲ್ಲಿಸಿ, ಕಾಂಗ್ರೆಸ್ ಪಕ್ಷಕ್ಕೆ ದಶಕಗಳಿಂದ ನಿಷ್ಠಾವಂತರಾಗಿ ಉಳಿದಿದ್ದರು. ಅಂತಹ ನಿಷ್ಠಾವಂತ ಕುಟುಂಬದ ಉತ್ತರಾಧಿಕಾರಿಯಾಗಿ ರಾಜಾ ವೇಣುಗೋಪಾಲ ನಾಯಕ ಅವರು ಕೂಡ ಪಕ್ಷದ ಪರವಾಗಿ ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಶ್ಲಾಘಿಸಿದ್ದಾರೆ.
ಯಾದಗಿರಿ ಜಿಲ್ಲೆಗೆ ಪ್ರಾತಿನಿಧ್ಯದ ಆಶಯ:
ರಾಜ್ಯದ ಆಡಳಿತದಲ್ಲಿ ಪ್ರಾದೇಶಿಕ ಸಮತೋಲನ ಕಾಯ್ದುಕೊಳ್ಳುವ ದೃಷ್ಟಿಯಿಂದ, ಯಾದಗಿರಿ ಜಿಲ್ಲೆಗೆ ಸೂಕ್ತ ಪ್ರಾತಿನಿಧ್ಯ ನೀಡಬೇಕು. ಜಿಲ್ಲೆಯ ಅಭಿವೃದ್ಧಿಗೆ ವೇಗ ನೀಡಲು ಮತ್ತು ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿಯಲು ಸಚಿವ ಸಂಪುಟದಲ್ಲಿ ಜಿಲ್ಲೆಯ ನಾಯಕರಿಗೆ ಸ್ಥಾನ ಕಲ್ಪಿಸುವುದು ಅತ್ಯಗತ್ಯವಾಗಿದೆ ಎಂದು ಶಾಂತಪ್ಪ ಮೇಸ್ತಕ, ಲಕ್ಷ್ಮಣ್ಣ ನಾಯಕ ಮತ್ತು ಅಮರೇಶ ಕೋಳುರು ಜಗದೀಶಗೌಡ ಒತ್ತಾಯಿಸಿದ್ದಾರೆ.
ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಗ್ರಾಮೀಣ ಮಟ್ಟದವರೆಗೆ ಬಲಪಡಿಸಲು ಮತ್ತು ರಾಜ್ಯದಲ್ಲಿ ಅಧಿಕಾರವನ್ನು ಸುಭದ್ರಗೊಳಿಸಲು ಈ ಬದಲಾವಣೆಗಳು ಅನಿವಾರ್ಯ ಎಂದು ಅವರು ತಿಳಿಸಿದ್ದಾರೆ.

