ಸ್ನೇಹಸಿರಿ ಗೆಳೆಯರ ಬಳಗದಿಂದ ಪರಿವಾರ ಸಮಾಗಮ, ಪ್ರತಿಭಾ ಪುರಸ್ಕಾರ, ನಶೆಮುಕ್ತ ಮಹಾಅಭಿಯಾನ
ಮುದ್ದೇಬಿಹಾಳ(ವಿಜಯಪುರ ಜಿಲ್ಲೆ): ಸಹಕಾರ, ಸಹನೆ ಕಡಿಮೆಯಾಗುತ್ತಿರುವ ಈ ದಿನಗಳಲ್ಲಿ ಗೆಳೆತನದ ಮಹತ್ವ ಸಾರುವ ಪರಿವಾರ ಸಮಾಗಮದಂಥ ಕಾರ್ಯಕ್ರಮಗಳು ಹೆಚ್ಚು ಅಗತ್ಯವಾಗಿವೆ. ಗೆಳೆತನದಲ್ಲಿ ಮನಸ್ಸು ದೊಡ್ಡದಾಗಿರಬೇಕು, ವಿಶಾಲವಾಗಿರಬೇಕು. ದೂರಾಲೋಚನೆ, ದೂರದೃಷ್ಟಿ ಇರಬೇಕು ಎಂದು ಹಿರೂರು ಅನ್ನದಾನೇಶ್ವರ ಸಂಸ್ಥಾನ ಹಿರೇಮಠದ ಪಿಠಾಧಿಪತಿಗಳಾದ ಷ.ಬ್ರ.ಶ್ರೀ ಜಯಸಿದ್ದೇಶ್ವರ ಶಿವಾಚಾರ್ಯರು ನುಡಿದರು.
ಹಡಲಗೇರಿ ರಸ್ತೆ ಪಕ್ಕದಲ್ಲಿರುವ ಶ್ರೀ ಪದ್ಮಾವತಿ ದೇವಸ್ಥಾನದ ಸಮುದಾಯ ಭವನದಲ್ಲಿ ವಿಬಿಸಿ ಪ್ರೌಢಶಾಲೆಯ 1985-86ನೇ ಸಾಲಿನ ಸ್ನೇಹಸಿರಿ ಗೆಳೆಯರ ಬಳಗವು ರವಿವಾರ ಏರ್ಪಡಿಸಿದ್ದ ಪರಿವಾರದ ಸಮಾಗಮ, ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಈ ಕಾರ್ಯಕ್ರಮವು ವೈಚಾರಿಕತೆಯಿಂದ ಕೂಡಿರುವ ವಿಶೇಷ ಕಾರ್ಯಕ್ರಮವಾಗಿದೆ. ಹಣ, ಆಸ್ತಿ, ಅಂತಸ್ತು, ಐಶ್ವರ್ಯ, ಉದ್ಯೋಗ ಮುಂತಾದವುಗಳ ಕೊರತೆಯಿಂದ ಮನುಷ್ಯ ಬಡವನಾಗುವುದಿಲ್ಲ ಬದಲಿಗೆ ಪರಸ್ಪರ ಮಾತನಾಡದಿರುವುದರಿಂದ, ಮುಖ ಗಂಟು ಹಾಕಿರುವುದರಿಂದ ಬಡವನಾಗಿ ಕಾಣುತ್ತಾನೆ. ಮನುಷ್ಯ ಬದುಕಿನಲ್ಲಿ ನೂರು ಕಾಲ ಬದುಕಿರುವಷ್ಟು ನಗು ಸಂಗ್ರಹಿಸಬೇಕು. ಗೆಳೆಯರ ನಡುವೆ ಸರಿ, ತಪ್ಪುಗಳ ಆರೋಗ್ಯಕರ ಚರ್ಚೆ ನಡೆಯಬೇಕು. ಸ್ನೇಹರಿಸಿ ಗೆಳೆಯರ ಬಳಗವು ನಗುವಿನ ಭಂಡಾರವಾಗಿರಲಿ ಎಂದರು.
ಮುಖ್ಯ ಅತಿಥಿಯಾಗಿದ್ದ ಮುದ್ದೇಬಿಹಾಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ನಿಕಟಪೂರ್ವ ಸರ್ವಾಧ್ಯಕ್ಷರಾಗಿದ್ದ ಹಿರಿಯ ಸಾಹಿತಿ ಅಶೋಕ ಮಣಿ ಅವರು ಮಾತನಾಡಿ, ಗೆಳೆತನದ ಮಹತ್ವ ವರ್ಣಿಸಲಾಗದಂಥದ್ದು. ಎಲ್ಲ ಗೆಳೆಯರು ಒಂದೆಡೆ ಸೇರುವುದು ಸಂಭ್ರಮದ ಸಂಕೇತವಾಗಿದೆ. ಗೆಳೆತನ ಅಮೂಲ್ಯವಾದದ್ದಾಗಿದ್ದು ಇದನ್ನು ಕೊನೇತನಕ ಉಳಿಸಿಕೊಂಡು ಹೋಗಬೇಕು. ಮುಂದಿನ ಪೀಳಿಗೆಯ ಬೆಳವಣಿಗೆಗೆ ಈಗಿನವರು ಮಾದರಿಯಾಗಬೇಕು. ದೇಶದ ಸಂಸ್ಕೃತಿಯು ಒಂದಾಗಿ, ಚನ್ನಾಗಿ ಬದುಕುವುದರಲ್ಲಿದೆ. ಗೆಳೆತನದ ಮಹತ್ವ, ಪ್ರೀತಿಯನ್ನು ಮಕ್ಕಳಿಗೂ ಹಂಚಿಕೊಳ್ಳಬೇಕು ಎಂದು ಹೇಳಿ ತಮ್ಮ ಬಾಲ್ಯದ, ಯೌವ್ವನದ ದಿನಗಳಲ್ಲಿ ಗೆಳೆಯರಿಂದ ಪಡೆದ ಸಹಕಾರ ಸ್ಮರಿಸಿಕೊಂಡರು.
ಭಾರತೀಯ ಸೇನೆಯ ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಶಿವಾನಂದ ಬಿರಾದಾರ, ಮೋಹನ್ ಬಿಗ್ ಸೇಲನ ಮುಖ್ಯಸ್ಥೆ ಪ್ರೇಮಲಾಬಾಯಿ ಹಂಚಾಟೆ, ವಿಜಯಪುರದ ಗುತ್ತಿಗೆದಾರ ಸೋಮನಾಥ ಸೂಳಿಭಾವಿ, ಗೆಳೆಯರ ಬಳಗದ ರಾಜೇಂದ್ರಕುಮಾರ ದಂಡಾವತಿ, ಉಮೇಶ ಕಂಠಿ, ಅಖಿಲ ಭಾರತ ವೀರಶೈವ ಮಹಾಸಭಾದ ಮುದ್ದೇಬಿಹಾಳ ತಾಲೂಕು ಘಟಕದ ಅಧ್ಯಕ್ಷ ವೆಂಕನಗೌಡ ಪಾಟೀಲ ವೇದಿಕೆಯಲ್ಲಿದ್ದರು.
ಇದೇ ವೇಳೆ ವಿವಿಧ ಪರೀಕ್ಷೆಗಳಲ್ಲಿ ಹೆಚ್ಚು ಅಂಕದೊಂದಿಗೆ ಸಾಧನೆ ತೋರಿದ ವಿದ್ಯಾರ್ಥಿಗಳಾದ ಸಿಂಚನಾ ಸಿದ್ರಾಮೇಶ ಉಪನಾಳ, ಬೀಬಿಆಯಿಷಾ ಬುರಾನಸಾಬ ರುದ್ರವಾಡಿ, ಪವಿತ್ರಾ ದೌಲತರಾಯ ವಡವಡಗಿ, ದಿಶಾ ಮಂಗಸೂಳಿ, ಗಿರೀಶ ಶ್ರೀಶೈಲ ಸಿದ್ದಾಪುರ ಸೇರಿದಂತೆ ಗೆಳೆಯರ ಬಳಗದ ಪ್ರತಿಭಾವಂತ ಮಕ್ಕಳನ್ನು ಸನ್ಮಾನಿಸಿ ಪ್ರೋತ್ಸಾಹಿಸಲಾಯಿತು.
ಶ್ರೀ ಪದ್ಮಾವತಿ ದೇವಸ್ಥಾನ ಕಮೀಟಿಯ ಕಾರ್ಯದರ್ಶಿ ಮಾಣಿಕಚಂದ ದಂಡಾವತಿ ಮತ್ತು ಅವರ ಪತ್ನಿ ಸೀಮಾ ದಂಡಾವತಿ, ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಶಿವಾನಂದ ಬಿರಾದಾರ, ನಿವೃತ್ತ ಸೈನಿಕ ಮಲ್ಲಪ್ಪ ಕಲ್ಲಪ್ಪಗೋಳ, ಎಲ್ಲ ಸ್ನೇಹಿತರಿಗೂ ಉಚಿತವಾಗಿ ಉಡುಪುಗಳನ್ನು ನೀಡಿದ ಮೋಹನ್ ಕ್ಲಾಥ್ ಮರ್ಚಂಟನ ಮಾಲಿಕ ಮೋಹನ್ ಹಂಚಾಟೆ ಸೇರಿದಂತೆ ವಿವಿಧ ಸಾಧಕರನ್ನು, ಗೆಳೆಯರ ಬಳಗದ ಸದಸ್ಯರನ್ನು ದಂಪತಿ ಸಮೇತ ಮತ್ತು ವೈಯುಕ್ತಿವಾಗಿ ಸನ್ಮಾನಿಸಿ ನೆನಪಿನ ಕಾಣಿಕೆ ನೀಡಿ ಸತ್ಕರಿಸಲಾಯಿತು. ಇದೇ ವೇಳೆ ಶಿವಾನಂದ ಮಂಗಸೂಳಿ ಸೇರಿದಂತೆ ಸೇವಾ ನಿವೃತ್ತ ಹಿರಿಯರನ್ನೂ ಸನ್ಮಾನಿಸಿ ಗೌರವಿಸಲಾಯಿತು.
ಸಿದ್ರಾಮೇಶ ಉಪನಾಳ, ಶ್ರೀಶೈಲ ಸಿದ್ದಾಪುರ, ಮೋಹನ್ ಹಂಚಾಟೆ, ರವಿ ಝಿಂಗಾಡೆ, ಬಸವರಾಜ ಗುರವ, ಎಂ.ಬಿ.ಪಾಟೀಲ, ರಾಘವೇಂದ್ರ ಬಡಿಗೇರ, ಬೆಂಗಳೂರಿನ ಪ್ರಭು ಮಂಗಸೂಳಿ, ಮಹಾರಾಷ್ಟ್ರದ ರತ್ನಾಗಿರಿಯ ಶ್ರೀಶೈಲ ಬಿಜ್ಜರಗಿ, ಅರುಣಕುಮಾರ ಹುನಗುಂದ, ಮಹಾಂತೇಶ ಕುಂಟೋಜಿ, ಎಸ್.ಐ.ಪಲ್ಲೇದ, ಬಸವರಾಜ ಬಡಿಗೇರ, ನಿಂಗಪ್ಪ ಚಟ್ಟೇರ, ಅಬ್ದುಲರಹೆಮಾನ ನದಾಫ, ಶಿವಪುತ್ರ ಅಜಮನಿ, ಈರಯ್ಯ ಹಿರೇಮಠ, ಶ್ರೀಕಾಂತ ಹಡಲಗೇರಿ ಸೇರಿದಂತೆ 100ಕ್ಕೂ ಹೆಚ್ಚು ಬಳಗದ ಸದಸ್ಯರು ಪಾಲ್ಗೊಂಡಿದ್ದರು.
ದಾನಮ್ಮ ಪ್ರಾರ್ಥಿಸಿದರು. ಸಾಹಿತಿ ಬುರಾನ್ ರುದ್ರವಾಡಿ ಸ್ವಾಗತಿಸಿದರು. ವೆಂಕನಗೌಡ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಿ.ಬಿ.ವಡವಡಗಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ಮುಖಾಂತರ ಪ್ರಧಾನಮಂತ್ರಿಯವರನ್ನು ನಿಯೋಗದೊಂದಿಗೆ ಭೇಟಿಯಾಗಿ ಈ ಭಾಗದ ಒಣದ್ರಾಕ್ಷಿ(ಮನೂಕ)ಗೆ ಬೆಂಬಲ ಬೆಲೆ ನೀಡುವಂತೆ ಮನವಿ ಮಾಡಿದ್ದೆವು. ನಮ್ಮ ಮನವಿಗೆ ಸ್ಪಂಧಿಸಿ ಒಣದ್ರಾಕ್ಷಿಯ ಬೆಂಬಲ ಬೆಲೆಯನ್ನು 380ರೂಗೆ ಹೆಚ್ಚಿಸಲಾಯಿತು. ಇದು ಸ್ವಾಮೀಜಿಗಳು ಮಾಡುವ ಸಾಮಾಜಿಕ ಕಾರ್ಯವಾಗಿದೆ.
-ಜಯಸಿದ್ದೇಶ್ವರ ಶಿವಾಚಾರ್ಯರು, ಅನ್ನದಾನೇಶ್ವರ ಸಂಸ್ಥಾನ ಹಿರೇಮಠ, ಹಿರೂರ (ತಾಳಿಕೋಟೆ ತಾಲೂಕು).
ನಸೆಮುಕ್ತ ಮಹಾಅಭಿಯಾನ:
ಇದೇ ಕಾರ್ಯಕ್ರಮದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಓಂಶಾಂತಿ ಭವನದ ವತಿಯಿಂದ ನಶೆಮುಕ್ತರಾಗುವ ಪ್ರತಿಜ್ಞಾ ಅಭಿಯಾನ ಏರ್ಪಡಿಸಲಾಗಿತ್ತು. ಬಿಕೆ ಶೋಭಾ ಅಕ್ಕನವರು ಮಾತನಾಡಿ ದಾದಿ ಪ್ರಕಾಶಮಣೀಜಿಯವರ ಸ್ಮರಣಾರ್ಥ ನಶೆಮುಕ್ತ ಭಾರತ ಅಭಿಯಾನ ಮತ್ತು ಮಿಷನ್ ಸ್ಪಂಧನ ಅಡಿಯಲ್ಲಿ ವಿಕಸಿತ ಭಾರತದತ್ತ ಒಂದು ಸಬಲವಾದ ಹೆಜ್ಜೆ ಇಡಲು 10 ಕೋಟಿ ನಶೆಮುಕ್ತರಾಗುವ ಪ್ರತಿಜ್ಞಎಗಳ ಮಹಾಅಭಿಯಾನ ದೇಶದ ಎಲ್ಲೆಡೆ ನಡೆಯುತ್ತಿದೆ. ಯಾವ್ಯಾವುದೋ ಕಾರಣಗಳಿಂದಾಗಿ ನಸೆಗೆ ದಾಸರಾಗಿರುವವರು ಈ ಕೂಡಲೇ ಅದನ್ನು ತ್ಯಜಿಸುವ ದೃಢಸಂಕಲ್ಪ ಮಾಡಬೇಕು. ಒಂದೂವರೆ ಇಂಚಿನ ಸಿಗರೇಟು ಐದೂವರೆ ಆರು ಅಡಿಯ ದೇಹವನ್ನು ನಾಶಮಾಡುತ್ತದೆ ಎನ್ನುವುದನ್ನು ತಿಳಿದುಕೊಳ್ಳಬೇಕು ಎಂದು ಹೇಳಿ ನಶೆಮುಕ್ತತೆಯ ಪ್ರಯೋಜನ, ಮಹತ್ವದ ಅರಿವು ಮೂಡಿಸಿದರು. ಇದೇ ವೇಳೆ ಎಲ್ಲರಿಂದಲೂ ನಶೆಮುಕ್ತರಾಗುವ ಪ್ರತಿಜ್ಞ ಮಾಡಿಸಲಾಯಿತು.

