ಮಳೆ ಕೊರತೆ, ಕಾಲುವೆಗೆ ನೀರು ಇಲ್ಲ: ಭತ್ತ ಬೆಳೆ ಒಣಗುವ ಭೀತಿ – ರೈತರಲ್ಲಿ ಆತಂಕ.
ಆಂಜನೇಯ ಮಟ್ಟೂರು.
ಕರೆಕಲ್ ಕ್ಯಾಂಪ್, ಆಗಸ್ಟ್ 2:
ಮಳೆ ಕೊರತೆ ಹಾಗೂ ತುಂಗಭದ್ರಾ ಎಡದಂಡೆ ಕಾಲುವೆಗೆ ಇನ್ನೂ ನೀರು ಹರಿಸದಿರುವುದರಿಂದ ಕರೆಕಲ್ ಕ್ಯಾಂಪ್ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಕರೆಕಲ್ ಕ್ಯಾಂಪ್ನ ರೈತ ಸತೀಶ್ ನಾಯಕ್ ಬಿ. ಅವರು ಸೇರಿದಂತೆ ಅನೇಕ ರೈತರು ಅಪಾರ ವೆಚ್ಚದಲ್ಲಿ ಭತ್ತ ಬಿತ್ತನೆ ಮಾಡಿದ್ದು, ಮಳೆಯ ಕೊರತೆಯಿಂದ ಬೆಳೆ ಒಣಗುವ ಸ್ಥಿತಿ ಎದುರಾಗಿದೆ. ಈ ಭಾಗದ ಕೃಷಿಯು ಮುಖ್ಯವಾಗಿ ತುಂಗಭದ್ರಾ ಎಡದಂಡೆ ಕಾಲುವೆ ನೀರನ್ನೇ ಅವಲಂಬಿಸಿದ್ದು, ಇಲ್ಲಿಯವರೆಗೆ ಕಾಲುವೆಗೆ ನೀರು ಹರಿಸದಿರುವುದು ರೈತರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.
ಈಗಾಗಲೇ ಬೀಜ, ಗೊಬ್ಬರ, ಕೂಲಿ ಹಾಗೂ ಕೃಷಿ ಕಾರ್ಯಗಳಿಗೆ ಸಾವಿರಾರು ರೂಪಾಯಿ ಖರ್ಚು ಮಾಡಿರುವ ರೈತರು, ನೀರಿನ ಕೊರತೆಯಿಂದ ಬೆಳೆ ನಷ್ಟವಾಗುವ ಭೀತಿಯಲ್ಲಿದ್ದಾರೆ. ಇನ್ನೂ ಕೆಲವು ದಿನಗಳ ಕಾಲ ನೀರು ದೊರೆಯದಿದ್ದರೆ ಭತ್ತದ ಬೆಳೆ ಸಂಪೂರ್ಣ ಹಾನಿಯಾಗುವ ಸಾಧ್ಯತೆ ಇದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
ರೈತ ಸತೀಶ್ ನಾಯಕ್ ಬಿ. ಮಾತನಾಡಿ, “ನಾವು ಭರವಸೆಯಿಂದ ಭತ್ತ ಬಿತ್ತನೆ ಮಾಡಿದ್ದೇವೆ. ಆದರೆ ಮಳೆ ಇಲ್ಲ, ಕಾಲುವೆಗೂ ನೀರು ಬಂದಿಲ್ಲ. ಸರ್ಕಾರ ಮತ್ತು ಸಂಬಂಧಿಸಿದ ಅಧಿಕಾರಿಗಳು ಕೂಡಲೇ ತುಂಗಭದ್ರಾ ಡ್ಯಾಂನಿಂದ ಎಡದಂಡೆ ಕಾಲುವೆಗೆ ನೀರು ಹರಿಸಿ ನಮ್ಮ ಬೆಳೆ ಉಳಿಸಬೇಕು. ಇಲ್ಲದಿದ್ದರೆ ರೈತರು ಭಾರೀ ನಷ್ಟ ಅನುಭವಿಸಬೇಕಾಗುತ್ತದೆ,”
ಎಂದು ಮನವಿ ಮಾಡಿದ್ದಾರೆ.

