Sunday, August 16, 2026
Homeನಿಮ್ಮ ಜಿಲ್ಲೆಸಚಿವ ನಾಗೇಂದ್ರ ವಿರುದ್ಧ ಬಿಜೆಪಿ ಹೋರಾಟ ಶತಸಿದ್ಧ: ಬಿ.ವೈ.ವಿಜಯೇಂದ್ರ

ಸಚಿವ ನಾಗೇಂದ್ರ ವಿರುದ್ಧ ಬಿಜೆಪಿ ಹೋರಾಟ ಶತಸಿದ್ಧ: ಬಿ.ವೈ.ವಿಜಯೇಂದ್ರ

ಬರ: ಇನ್ನಾದರೂ ಸರ್ಕಾರ ಎಚ್ಚೆತ್ತು ರೈತರಿಗೆ ಪರಿಹಾರ ನೀಡಲಿ

  • ನಾಗೇಂದ್ರ ವಿರುದ್ಧ ಸದನದಲ್ಲಿ ಬಿಜೆಪಿ ಹೋರಾಟ ಖಂಡಿತ
  • ಬರ: ಅನ್ನದಾತರ ನೆರವಿಗೆ ಸರ್ಕಾರ ಸ್ಪಂದಿಸಲಿ
  • ಕೇಂದ್ರಕ್ಕೆ ಪತ್ರ ಬರೆದರೆ ಸಾಲದು, ರಾಜ್ಯವೂ ನೆರವು ನೀಡಬೇಕು
  • ಆರ್‍ಎಸ್‍ಎಸ್ ಬಗ್ಗೆ ತಿಳಿಯದೆ ಪ್ರಿಯಾಂಕ್ ಟೀಕೆ

ಕೋಲಾರ: ಭ್ರಷ್ಟಾಚಾರದ ಗಂಭೀರ ಆರೋಪ ಎದುರಿಸುತ್ತಿರುವ ನಾಗೇಂದ್ರ ಅವರನ್ನು ಸಚಿವ ಸಂಪುಟದಿಂದ ಕೈ ಬಿಡಬೇಕು ಎಂದು ಆಗ್ರಹಿಸಿ ಬಿಜೆಪಿ ಮುಂಬರುವ ಅಧಿವೇಶನದಲ್ಲಿ ಹೋರಾಟ ಮಾಡಲಿದೆ. ಸದನದ ಹೊರಗೂ ಹೋರಾಟ ನಡೆಸುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ.

ಇಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾಗೇಂದ್ರ ಅವರ ವಿರುದ್ಧ ಆರೋಪಪಟ್ಟಿ ದಾಖಲಾಗಿದೆ. ವಾಲ್ಮೀಕಿ ನಿಗಮದ ನೂರಾರು ಕೋಟಿ ಹಣವನ್ನು ಲಪಟಾಯಿಸಿದ ಅವರನ್ನು ಮತ್ತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸಚಿವರಾಗಿ ಮಾಡಿದ್ದಾರೆ.

ಅವರನ್ನು ಸಂಪುಟದಿಂದ ಕೈ ಬಿಡಬೇಕು ಎಂದು ಆಗ್ರಹಿಸಿದರು.
ವಾಲ್ಮೀಕಿ ನಿಗಮದ ಹಣವನ್ನು ಕೊಳ್ಳೆಹೊಡೆದು ತೆಲಂಗಾಣದಲ್ಲಿ ಬ್ಯಾಂಕ್ ಖಾತೆಗಳನ್ನು ತೆರೆದು ಹಣ ಡ್ರಾ ಮಾಡಿದ್ದಾರೆ. ಪರಿಶಿಷ್ಟ ಪಂಗಡದ ಮಕ್ಕಳ ಕಲ್ಯಾಣಕ್ಕೆ ಮೀಸಲಾಗಿ ಇಟ್ಟಿದ್ದ ಹಣವನ್ನು ನುಂಗಿದ್ದ ವ್ಯಕ್ತಿಯನ್ನು ಮತ್ತೆ ಸಚಿವರಾಗಿ ಮಾಡಿರುವುದನ್ನು ಬಿಜೆಪಿ ಖಂಡಿಸಲಿದೆ ಎಂದರು.

ನಾಗೇಂದ್ರ ಅವರು ಜಾಮೀನು ನಿಯಮ ಉಲ್ಲಂಘನೆ ಮಾಡಿದ್ದರೆ ಅದನ್ನು ನ್ಯಾಯಾಲಯ ನೋಡಿಕೊಳ್ಳಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬರ: ರೈತರಿಗೆ ಇನ್ನಾದರೂ ಸ್ಪಂದಿಸಲಿ…
ರಾಜ್ಯದಲ್ಲಿ ಮಳೆ ಕೊರತೆಯಿಂದ ಭೀಕರ ಬರ ಇದೆ. ರೈತರು ಕಷ್ಟದಲ್ಲಿದ್ದಾರೆ. ಕುಡಿಯುವ ನೀರಿಗೆ ಹಾಹಾಕಾರ ಇದೆ. ಆದರೆ, ಸಚಿವರು ಮತ್ತು ಮುಖ್ಯಮಂತ್ರಿಗಳು ಖಾತೆ ಹಂಚಿಕೆಗೆ ದೆಹಲಿ ಪ್ರವಾಸ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು. ರಾಗಿ, ಜೋಳ ಸೇರಿದಂತೆ ಹಲವು ಬೆಳೆಗಳು, ಹಣ್ಣು, ತರಕಾರಿ ಬೆಳೆದ ರೈತರು ನೀರಿಲ್ಲದೆ ಪರದಾಡುತ್ತಿದ್ದಾರೆ. ರಾಜ್ಯ ಸರ್ಕಾರ ಈ ಕಡೆ ಗಮನ ನೀಡುತ್ತಿಲ್ಲ. ಆದ್ದರಿಂದ ರೈತರಿಗೆ ಪರಿಹಾರ ನೀಡಬೇಕು ಹಾಗೂ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.

ತಡವಾಗಿಯಾದರೂ ಮುಖ್ಯಮಂತ್ರಿಗಳು ಎಚ್ಚೆತ್ತುಕೊಂಡು ರೈತರ ಕಷ್ಟಕ್ಕೆ ಸ್ಪಂದಿಸಬೇಕು ಎಂದರು.

ಪತ್ರ ಬರೆದು ಕೈ ಕಟ್ಟಿ ಕೂರುವುದಲ್ಲ…
ಬರ ಪರಿಹಾರಕ್ಕೆ ಕೇವಲ ಕೇಂದ್ರ ಸರ್ಕಾರದ ಅವಲಂಬನೆ ಮಾಡುವುದಕ್ಕಿಂತ ರಾಜ್ಯ ಸರ್ಕಾರ ಏನು ನೀಡಿದೆ ಎಂಬುದೂ ಮುಖ್ಯ. ಇದಕ್ಕೆ ಸಿಎಂ ಉತ್ತರ ಕೊಡಬೇಕು. ಇವರೇ ರೈತರಿಗೆ ಏನೂ ಪರಿಹಾರ ನೀಡಿಲ್ಲ. ಕೇವಲ ಪ್ರಧಾನಿಗಳಿಗೆ ಪತ್ರ ಬರೆದು ಕೈ ಕಟ್ಟಿ ಕೂರುವುದಲ್ಲ. ಮೊದಲು ಇವರು ಪರಿಹಾರ ನೀಡಿ ಆನಂತರ ಕೇಂದ್ರದ ಬಳಿ ಹೋಗಲಿ ಎಂದು ತಿಳಿಸಿದರು.

ಬಿಡದಿ: ಸದನದಲ್ಲೂ ಹೋರಾಟ ಮಾಡ್ತೇವೆ…
ಬಿಡದಿ ಟೌನ್‍ಶಿಪ್ ವಿರೋಧಿಸಿ ಜೆಡಿಎಸ್ ಪಾದಯಾತ್ರೆ ಆರಂಭಿಸಿದೆ. ನಮ್ಮ ನಿಲುವನ್ನು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರು ತಿಳಿಸಿದ್ದಾರೆ. ಸಾಕೇಂತಿಕವಾಗಿ ಹೋರಾಟಕ್ಕೆ ಬೆಂಬಲ ನೀಡಲು ತೀರ್ಮಾನಿಸಿದ್ದೇವೆ. ಅಶೋಕ್ ಹಾಗೂ ಛಲವಾದಿ ನಾರಾಯಣ ಸ್ವಾಮಿ ಅವರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದಾರೆ. ಈ ಹೋರಾಟವನ್ನು ಆರಂಭಿಸಿದ್ದು ರೈತರು. ರೈತರನ್ನು ಬೆದರಿಸಿ, ಹೆದರಿಸಿ ಜಮೀನನ್ನು ಪಡೆಯುವ ದುಸ್ಸಾಹಸವನ್ನು ಸರ್ಕಾರ ಮಾಡುತ್ತಿದೆ.

ಒತ್ತಾಯವಾಗಿ ಒಕ್ಕಲೆಬ್ಬಿಸುತ್ತಿದ್ದಾರೆ. ಸದನದ ಒಳಗೂ ನಾವು ಬಿಡದಿ ಬಗ್ಗೆ ಹೋರಾಟ ಮಾಡ್ತೇವೆ ಎಂದರು.

ಆರ್‍ಎಸ್‍ಎಸ್ ನಿಷೇಧ ಪ್ರಿಯಾಂಕ್‍ಗೆ ಆಗಲ್ಲ…
ಪ್ರಶ್ನೆಗೆ ಉತ್ತರಿಸಿದ ಅವರು, ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಹೀಗೆ ಎಲ್ಲರೂ ಆರ್‍ಎಸ್‍ಎಸ್ ಅನ್ನು ಮುಚ್ಚಿ ಹಾಕ್ತೇವೆ, ಬಹಿಷ್ಕಾರ ಹಾಕ್ತೇವೆ ಎಂದು ಹೇಳಿದ್ದರು. ಆರ್‍ಎಸ್‍ಎಸ್ ರಾಷ್ಟ್ರಭಕ್ತರನ್ನು ನಿರ್ಮಿಸುವ ಕೆಲಸವನ್ನು ಮಾಡುತ್ತಿದೆ ಎಂಬುದನ್ನು ಪ್ರಿಯಾಂಕ್ ಖರ್ಗೆ ಅವರು ತಿಳಿಯಬೇಕು. ಹಲವು ದಶಕಗಳಿಂದ ಆರ್‍ಎಸ್‍ಎಸ್ ಪವಿತ್ರ ಕಾರ್ಯದಲ್ಲಿ ತೊಡಗಿದೆ. ಇದೆಲ್ಲ ತಿಳಿಯದ ಪ್ರಿಯಾಂಕ್ ಖರ್ಗೆ ಅವರು ಟೀಕೆ ಮಾಡುತ್ತಾರೆ. ಅವರ ಕೆಲಸವನ್ನು ಮಾಡದೇ ಟೀಕೆಯಲ್ಲೇ ತೊಡಗಿದ್ದಾರೆ.
ಆರ್‍ಎಸ್‍ಎಸ್ ನಿಷೇಧ ಮಾಡುವುದು ಅವರ ಕೈನಿಂದ ಆಗಲ್ಲ ಎಂದು ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -spot_img

Most Popular

Recent Comments