Monday, August 17, 2026
Homeನಿಮ್ಮ ಜಿಲ್ಲೆಮಾನವೀಯತೆ, ಸಮಾನತೆ ಇದೇ ನಿಜವಾದ ಧರ್ಮ: ಸಿಎಂ ಡಿ‌ ಕೆ ಶಿವಕುಮಾರ್

ಮಾನವೀಯತೆ, ಸಮಾನತೆ ಇದೇ ನಿಜವಾದ ಧರ್ಮ: ಸಿಎಂ ಡಿ‌ ಕೆ ಶಿವಕುಮಾರ್

ನನಗೆ ಮುಖ್ಯಮಂತ್ರಿ ಸ್ಥಾನ; ರಂಭಾಪುರಿ ಶ್ರೀಗಳ ಆಸೆಯಾಗಿತ್ತು

ವೀರಶೈವ- ಲಿಂಗಾಯತ ಧರ್ಮ ಗೊಂದಲ; ಶ್ರೀಗಳ ಕ್ಷಮೆ ಕೇಳಿದ್ದೆ

ಬರ ಪ್ರಕೃತಿ ನಿಯಮ

ಬೆಂಗಳೂರು, ಆ.2

“ಧರ್ಮ ಎಂದರೆ ಪೂಜೆ-ಪುನಸ್ಕಾರವಲ್ಲ. ಸತ್ಯ, ಶಿಸ್ತು, ನೀತಿ, ಪ್ರಾಮಾಣಿಕತೆ. ಜೊತೆಗೆ ಎಲ್ಲರನ್ನು ಸಮನಾಗಿ ಕಾಣುವ ಮಾನವೀಯತೆಯೇ ನಿಜವಾದ ಧರ್ಮ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಹೇಳಿದರು.

ಬೆಂಗಳೂರಿನ ಭಾರತ್ ನಗರದಲ್ಲಿ ಭಾನುವಾರ ನಡೆದ ಧರ್ಮಜಾಗೃತಿ ಸಮಾರಂಭವನ್ನು ಸಿಎಂ ಡಿ ಕೆ ಶಿವಕುಮಾರ್ ಅವರು ಉದ್ಘಾಟಿಸಿ ಮಾತನಾಡಿದರು.

“ಮಾನವ ಧರ್ಮಕ್ಕೆ ಜಯವಾಗಲಿ, ಮಾನವ ಧರ್ಮದಿಂದಲೇ ವಿಶ್ವಕ್ಕೆ ಶಾಂತಿ. ಜೊತೆಗೆ ಸಾಹಿತ್ಯ, ಸಂಸ್ಕೃತಿ ವೃದ್ಧಿಯಾಗಬೇಕು. ಇದನ್ನು ಪಾಲನೆ ಮಾಡಬೇಕು ಎಂದು ವೀರ ಗಂಗಾಧರ ಅಜ್ಜಯ್ಯ ಅವರು ನಮಗೆ ಅತ್ಯುತ್ತಮ ಮಾರ್ಗ ಹಾಕಿಕೊಟ್ಟಿದ್ದಾರೆ.‌ ನಾವೆಲ್ಲರೂ ಈ ಮಾರ್ಗದಲ್ಲಿ ನಡೆಯಬೇಕು” ಎಂದರು.

“ಕೆಲವರು ಧರ್ಮ‌ ಬೇಡ ಎಂದು ತಮ್ಮದೇ ನಂಬಿಕೆಯ ಮಾರ್ಗದಲ್ಲಿ ನಡೆಯುತ್ತಾರೆ. ಅವರು ಹುಟ್ಟಿದಾಗ ಉಪನಯನ, ನಾಮಕರಣ ಸೇರಿದಂತೆ ಹಲವಾರು ಧಾರ್ಮಿಕ ಕಾರ್ಯಗಳು ನಡೆದಿರುತ್ತವೆ. ಅದೇ ರೀತಿ ಭಿನ್ನ ಹಾದಿಯಲ್ಲಿ ನಡೆಯುವವರು ಸತ್ತಾಗ ಅವರನ್ನು ಹೂಳಬೇಕೋ, ಸುಡಬೇಕೋ ಎಂದು ತೀರ್ಮಾನ ಮಾಡುವುದು ಧರ್ಮ. ಯಾವುದೇ ಧರ್ಮವಾದರೂ ಅದನ್ನು ಬಿಡಲು ಸಾಧ್ಯವಿಲ್ಲ.‌ ದೇವನೊಬ್ಬ ನಾಮ ಹಲವು” ಎಂದು ಹೇಳಿದರು.

ನನಗೆ ಮುಖ್ಯಮಂತ್ರಿ ಸ್ಥಾನ; ರಂಭಾಪುರಿ ಶ್ರೀಗಳ ಆಸೆಯಾಗಿತ್ತು

“ರಂಭಾಪುರಿ ಶ್ರೀಗಳು ಗಂಗಾಧರ ಅಜ್ಜಯ್ಯ ಅವರಂತೆ ನನ್ನ ಮೇಲೆ ಅಭಯವನ್ನಿಟ್ಟಿದ್ದರು. ನನ್ನನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ನೋಡಬೇಕು ಎಂದು ಆಸೆಯನ್ನಿಟ್ಟುಕೊಂಡಿದ್ದ ಪ್ರಮುಖರು.‌ ಮಠದಲ್ಲಿಯೇ ಅವರ ದರ್ಶನ ಮಾಡಬೇಕು ಎಂದುಕೊಂಡಿದ್ದೆ. ಬೆಂಗಳೂರಿನಲ್ಲೇ ಅವರ ಆಶೀರ್ವಾದ ದೊರಕಿದೆ” ಎಂದು ಹೇಳಿದರು.

ವೀರಶೈವ- ಲಿಂಗಾಯತ ಧರ್ಮ ಗೊಂದಲ; ಶ್ರೀಗಳ ಕ್ಷಮೆ ಕೇಳಿದ್ದೆ

“ವೀರಶೈವ ಧರ್ಮ ವಿಚಾರದಲ್ಲಿ ಈ ಹಿಂದೆ ನಮ್ಮ‌ ಸರ್ಕಾರ ಇದ್ದಾಗ ಒಂದಷ್ಟು ಗೊಂದಲ ಉಂಟಾಗಿತ್ತು. ಆಗ ನಾನು ಲಕ್ಷ್ಮೇಶ್ವದಲ್ಲಿದ್ದ ರಂಭಾಪುರಿ ಶ್ರೀಗಳ ಬಳಿಗೆ ಹೋಗಿ ನಮ್ಮ ಪಕ್ಷದಿಂದ ತಪ್ಪಾಗಿದೆ ಎಂದು ಕ್ಷಮೆ ಕೇಳಿದ್ದೆ. ಆಗ ಬೇಕಾದಷ್ಟು ಜನ ಟೀಕೆ ಮಾಡಿದರು. ‌ಆದರೆ ಅಂದು ನಾವು ಮಾಡಿದ ಕೆಲಸ ಉಳಿದುಕೊಂಡಿದೆ.‌ ನಾನು ಕ್ಷಮಾಪಣೆ ಕೇಳಿದ್ದನ್ನ ವಿರೋಧಿಗಳೂ ಒಪ್ಪಿಕೊಂಡಿದ್ದಾರೆ” ಎಂದರು.

ಬರ ಪ್ರಕೃತಿ ನಿಯಮ

“ಡಿ‌ ಕೆ ಶಿವಕುಮಾರ್ ಬಂದ ಬರ ತಂದ ಎಂದು ಅನೇಕ ಜನ ಟೀಕೆ ಮಾಡುತ್ತಿದ್ದರು. ಆದರೆ ದೇಶದ ಪ್ರಧಾನಿಯವರೇ ಬರ ಬರಲಿದೆ ಎಂದಿದ್ದರು.‌ ಎರಡು- ಮೂರು ವರ್ಷಗಳಿಗೊಮ್ಮೆ ಬರ ಬರುವುದು ಪ್ರಕೃತಿ ನಿಯಮ. ಅಜ್ಜಯ್ಯನವರನ್ನು ಬರದ ವಿಚಾರವಾಗಿ ಕೇಳಿದೆ ಅವರು ಮೂರು ದಿನದ ನಂತರ ಉತ್ತರ ಸಿಗುತ್ತದೆ ಎಂದರು. ಈಗ 70 ಸಾವಿರ ಕ್ಯೂಸೆಕ್ಸ್ ನೀರು ಹರಿಯುತ್ತಿದೆ” ಎಂದರು.

“ನಾನು ರಾಜ್ಯದ ದೊರೆಯಲ್ಲ, ಸೇವಕ. ಎಂದಿಗೂ ನನ್ನ ಆ ರೀತಿ ಕರೆಯಬೇಡಿ. ದೊರೆಗಳ ಕಾಲ ಹೋಗಿದೆ. ಈಗ ಸಂವಿಧಾನ, ‌ಪ್ರಜಾಪ್ರಭುತ್ವದ ಕಾಲ. ನನಗೆ ಇತಿಹಾಸ ಓದುವುದರ ಮೇಲೆ ಆಸಕ್ತಿಯಿಲ್ಲ. ಇತಿಹಾಸ ಸೃಷ್ಟಿಸಲು ಆಸಕ್ತಿ” ಎಂದರು.

“ಬಸವಣ್ಣನವರು ಕಾಯಕವೇ ಕೈಲಾಸ ಎಂದಿದ್ದಾರೆ. ಕೆಂಗಲ್ ಹನುಮಂತಯ್ಯ ಅವರು ಸರ್ಕಾರದ ಕೆಲಸ ದೇವರ ಕೆಲಸ ಎಂದಿದ್ದಾರೆ. ಈಗ ರಾಜ್ಯದ ಜನರ ಕಾಯಕ ಮಾಡುವ ಅವಕಾಶ ಸಿಕ್ಕಿದೆ. ಈ ಪ್ರತಿ ಕ್ಷಣವನ್ನೂ ಬಳಸಿಕೊಳ್ಳುತ್ತೇನೆ. ನಮ್ಮ ಹುಟ್ಟು ಸಾವಿನ ಮಧ್ಯೆ ಸಾಧನೆ ಮಾಡೋಣ” ಎಂದು ಹೇಳಿದರು.

“ಮಾನವ ಜಾತಿ, ಮಾನವ ಧರ್ಮಕ್ಕೆ ಸೇರಿದ ಮಠಗಳಲ್ಲಿ ರಂಭಾಪುರಿ ಮಠ ಮುಖ್ಯವಾದುದು. ಎಲ್ಲಾ ವರ್ಗದ ಜನರಿಗೂ ಮಾರ್ಗದರ್ಶನ ನೀಡುತ್ತಾ ಬಂದಿದೆ. ನಾವು ಜೀವನದಲ್ಲಿ ಹುಡುಕಿಕೊಂಡು ಹೋಗುವ ನೆಮ್ಮದಿ ಶಾಂತಿಗೆ ಇಂತಹ ಮಠಗಳಿಂದ ಮಾರ್ಗದರ್ಶನ ದೊರೆಯುತ್ತದೆ” ಎಂದು ಹೇಳಿದರು.

“ಜನ ರಾಮ ಮಂದಿರಕ್ಕೆ ಇಟ್ಟಿಗೆ, ಹಣ ನೀಡಿದರು. ಈಗ ಏನಾಗಿದೆ ಎಂದು ನಾನು ಚರ್ಚೆಗೆ ಹೋಗುವುದಿಲ್ಲ. ಮಠದ ಕೆಲಸಕ್ಕೆ ಜನ ಉದಾರವಾಗಿ ಕೈ ಜೋಡಿಸಬೇಕು.‌ ಆಗ ನಿಮ್ಮ ಹೆಸರು ಉಳಿಯುತ್ತದೆ. ಧರ್ಮ, ಸಂಸ್ಕೃತಿ ಬೆಳೆಯುತ್ತದೆ” ಎಂದು ಹೇಳಿದರು.

“ರೇಣುಕಾಚಾರ್ಯ ಕಾಲೇಜಿನ ವಿದ್ಯಾರ್ಥಿಯಾಗಿದ್ದಾಗಲೇ ನನಗೆ ವಿಧಾನಸಭೆಗೆ ಸ್ಪರ್ಧಿಸಲು ಅವಕಾಶ ಸಿಕ್ಕಿತು.‌ ಅಂದಿನಿಂದಲೇ ನಾನು ಈ ಮಠದ ಅನುಯಾಯಿ. ನನ್ನಂತಹ ನೂರಾರು ಶಿಷ್ಯರು ಇಲ್ಲಿ ತಯಾರಾಗಿದ್ದಾರೆ. ಗುರುವೇ ಶಿವ,‌ ಗುರುವೇ ಪ್ರಸಾದ, ಗುರುವೇ ಆಚಾರ, ಗುರುವೇ ಜಗತ್ತು. ಈ ಗುರುವಿನ ಹಾದಿಯಲ್ಲಿ ನಡೆದರೆ ಆಚಾರ. ನಡೆ, ನುಡಿ, ಸತ್ಕರ್ಮ ಇವೇ ಧರ್ಮದ ನಿಜ ರೂಪ. ಧರ್ಮೋ ರಕ್ಷತಿ ರಕ್ಷಿತಃ ಅಂದರೆ, ನಾವು ಧರ್ಮವನ್ನು ರಕ್ಷಿಸಿದರೆ. ಧರ್ಮ ನಮ್ಮನ್ನು ರಕ್ಷಿಸುತ್ತದೆ” ಎಂದು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -spot_img

Most Popular

Recent Comments