Tuesday, February 17, 2026
Homeಸುದ್ದಿತಲೆದಂಡದ ಬದಲು ಜಾತಿಗಣತಿ ಅಡ್ಡ ಇಟ್ಟಎಐಸಿಸಿ- ಛಲವಾದಿ ನಾರಾಯಣಸ್ವಾಮಿ

ತಲೆದಂಡದ ಬದಲು ಜಾತಿಗಣತಿ ಅಡ್ಡ ಇಟ್ಟಎಐಸಿಸಿ- ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು ಜೂ 11 : ಆರ್‍ಸಿಬಿ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತ ಮತ್ತು 11 ಸಾವಿಗೆ ಸಂಬಂಧಿಸಿ ರಾಷ್ಟ್ರೀಯ ಕಾಂಗ್ರೆಸ್ ಸಮಿತಿಯಿಂದ (ಎಐಸಿಸಿ) ಸಿಎಂ, ಡಿಸಿಎಂ ತಲೆದಂಡದ ನಿರೀಕ್ಷೆಯಲ್ಲಿದ್ದೆವು. ಅದರ ಬದಲಾಗಿ ಜಾತಿಗಣತಿಯನ್ನು ಅಡ್ಡ ಇಟ್ಟು ಜನರ ಗಮನವನ್ನು ಬೇರೆಡೆ ಸೆಳೆಯಲು ಕಾಂಗ್ರೆಸ್ ಪಕ್ಷ ಪ್ರಯತ್ನಿಸುತ್ತಿದೆ ಎಂದು ರಾಜ್ಯ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆಕ್ಷೇಪಿಸಿದ್ದಾರೆ.
ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜ್ಯದ ಕಾಂಗ್ರೆಸ್ ಸರ್ಕಾರವು ಆರ್.ಸಿ.ಬಿ ಗೆಲುವಿನ ಪ್ರಯೋಜನ ಪಡೆಯಲು ಪಂದ್ಯಾಟವನ್ನು ಗೆಲ್ಲುವ ಮೊದಲೇ ಸಂಭ್ರಮಾಚರಣೆಗೆ ಅನುಮತಿ ಪಡೆದಿತ್ತು. ಬಳಿಕ ಸಂಭ್ರಮ ಆಚರಿಸಲು ಹೋಗಿ 11 ಜನರ ಸಾವಿಗೆ ಕಾರಣವಾದ ಘಟನೆ ಇಡೀ ದೇಶದಲ್ಲಿ ಸುದ್ದಿಯಾಗಿದೆ ಎಂದು ಗಮನ ಸೆಳೆದರು.
ನೂರಾರು ಜನರು ಗಾಯಗೊಂಡ ಈ ದುರ್ಘಟನೆಯ ಬಗ್ಗೆ ವಿರೋಧ ಪಕ್ಷ ಬಿಜೆಪಿ, ದುರಂತವನ್ನು ಎಳೆ ಎಳೆಯಾಗಿ ಬಿಡಿಸಿ ಖಂಡಿಸಿದೆ. ಈ ಹಿನ್ನೆಲೆಯಲ್ಲಿ ಎಐಸಿಸಿಯವರು ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳನ್ನು ದೆಹಲಿಗೆ ಕರೆಸಿಕೊಂಡಿದ್ದರು. ಇವರು ಮಾಡಿದ ಅಪರಾಧಕ್ಕೆ ಇವರಿಬ್ಬರ ತಲೆದಂಡವಾಗುತ್ತದೆ ಅಂದುಕೊಂಡಿದ್ದೆವು ಎಂದ ಅವರು, ಬಿಜೆಪಿ ಯಾವುದೇ ಕಾರಣಕ್ಕೂ ಇವರ ವಿರುದ್ಧ ಹೋರಾಟ ನಿಲ್ಲಿಸುವುದಿಲ್ಲ, ಇವರಿಬ್ಬರೂ ಘಟನೆಯ ಹೊಣೆ ಹೊತ್ತು ರಾಜೀನಾಮೆ ಸಲ್ಲಿಸುವವರೆಗೂ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಇಂದು ಜಾರಿ ನಿರ್ದೇಶನಾಲಯದ (ಇ.ಡಿ.) ದಾಳಿ ಆಗಿದೆ. ವಾಲ್ಮೀಕಿ ನಿಗಮದಲ್ಲಿ 187 ಕೋಟಿ ಹಣವನ್ನು ಕದ್ದು ತಿಂದಿದ್ದರು. ಶಾಸನ ಸಭೆಯಲ್ಲಿ ಮುಖ್ಯಮಂತ್ರಿಗಳು ಕೇವಲ 87 ಕೋಟಿ ಎಂದು ಒಪ್ಪಿಕೊಂಡಿದ್ದರು. ಭ್ರಷ್ಟಾಚಾರವನ್ನು ಒಪ್ಪಿಕೊಂಡ ನಂತರವೂ ಅಧಿಕಾರದಲ್ಲಿ ಮುಂದುವರೆದಿರುವುದು ನಾಚಿಕೆಗೇಡಿನ ಸಂಗತಿ ಎಂದು ಖಂಡಿಸಿದರು.
ಇ.ಡಿ ರೇಡ್ ಆಗಿರುವ ಜನನಾಯಕರು ಯಾರ್ಯಾರು ಎಷ್ಟು ಬಳಸಿದ್ದಾರೆ ಎಂಬ ವಿವರ ಸಿಕ್ಕಿದೆ, ಈ ಪ್ರಕರಣದಲ್ಲಿ ಅಧಿಕಾರಿ ಚಂದ್ರಶೇಖರ್ ಮರಣ ಹೊಂದಿದ್ದು ಇವರ ಸಾವಿನ ಬಗ್ಗೆ ಸರ್ಕಾರ ಒಂದು ದಿನವೂ ಪ್ರಸ್ತಾಪ ಮಾಡಿಲ್ಲ. ಯಾರ್ಯಾರು ಅಪರಾಧದಲ್ಲಿ ಪಾಲ್ಗೊಂಡಿದ್ದಾರೋ ಅವರೆಲ್ಲರ ಸದಸ್ಯತ್ವವು ರದ್ದಾಗುತ್ತದೆ ಎಂದರು.
ನಿನ್ನೆ ಇ.ಡಿ. ಪತ್ರ ಬಿಡುಗಡೆ ಮಾಡಿದ್ದು ಮೂಡಾದಲ್ಲಿ 400 ಕೋಟಿ ರೂಗಳ ಆಸ್ತಿಯನ್ನು ವಶಪಡಿಸಿಕೊಂಡಿರುವ ಬಗ್ಗೆ ಪತ್ರ ಬಿಡುಗಡೆ ಮಾಡಿದೆ. ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಕೇಂದ್ರ ಸರ್ಕಾರವನ್ನು ದೂರುತ್ತಿದ್ದು ಜನರ ಗಮನ ಬೇರೆಡೆಗೆ ಸೆಳೆಯಲು ಪ್ರಯತ್ನ ಮಾಡಬಾರದು. ಬಿಜೆಪಿ, ಈ ಕಾಲ್ತುಳಿತದ ಪ್ರಕರಣವನ್ನು ಬಿಡುವ ಪ್ರಶ್ನೆಯೇ ಇಲ್ಲ, ಸರ್ಕಾರವು ತಮ್ಮ ಭ್ರμÁ್ಟಚಾರವನ್ನು ಮತ್ತು ಕಾಲ್ತುಳಿತದ ಪ್ರಕರಣವನ್ನು ಒಪ್ಪಿಕೊಂಡು ರಾಜೀನಾಮೆ ಕೊಡಬೇಕೆಂದು ಆಗ್ರಹಿಸಿದರು.
ಕಾಂಗ್ರೆಸ್ ಸರ್ಕಾರವು ದಿನಕ್ಕೊಂದು ಹಗರಣವಲ್ಲ; ಒಂದೇ ದಿನಕ್ಕೆ ಮೂರು ಹಗರಣಗಳನ್ನು ಮಾಡುತ್ತಿದೆ. ಸರ್ಕಾರದಲ್ಲಿರುವವರು ಮುಖಭಂಗ, ಅವಮಾನವನ್ನೆಲ್ಲ ಗಾಳಿಗೆ ತೂರಿ, ಅಧಿಕಾರಕ್ಕೆ ಅಂಟಿಕೊಂಡಿದ್ದಾರೆ. ಸರ್ಕಾರ ಎಲ್ಲ ಥರದ ತಪ್ಪುಗಳನ್ನು ಮಾಡಿ, ನಾಚಿಕೆ, ಮಾನ-ಮರ್ಯಾದೆ ಬಿಟ್ಟು ಏನೂ ಆಗಿಲ್ಲವೆಂದು ವರ್ತಿಸುತ್ತಿದೆ. ಇವರು ತಪ್ಪು ಮಾಡಿದ್ದಕ್ಕೆ ತಾನೇ ಇ.ಡಿ. ಮತ್ತು ಸಿ.ಬಿ.ಐ ತನಿಖೆ ಮಾಡಲು ಬರುವುದು? ಇವರು ತಪ್ಪು ಮಾಡಿಲ್ಲವೆಂದರೆ ತನಿಖಾ ಸಂಸ್ಥೆಗಳು ಏಕೆ ಬರುತ್ತವೆ? ಎಂದು ಪ್ರಶ್ನಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -spot_img

Most Popular

Recent Comments