ಬೆಳಗಾವಿ: ಬೆಳಗಾವಿ ವಿಧಾನಸಭಾ ಅಧಿವೇಶನದಲ್ಲಿ ಲಿಂಗಸೂಗೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಮಾನಪ್ಪ ವಜ್ಜಲ್ ಅವರು ಕ್ಷೇತ್ರದಲ್ಲಿ ತೀವ್ರವಾಗಿರುವ ಕುಡಿಯುವ ನೀರಿನ ಸಮಸ್ಯೆಯನ್ನು ಸದನದ ಗಮನಕ್ಕೆ ತಂದರು. ಲಿಂಗಸೂಗೂರು, ಹಟ್ಟಿ ಹಾಗೂ ಮುದಗಲ್ ನಗರಗಳಲ್ಲಿ ಪ್ರಸ್ತುತ 10 ದಿನಕ್ಕೊಮ್ಮೆ ಮಾತ್ರ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತಿದ್ದು, ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಹೇಳಿದರು.
ಲಿಂಗಸೂಗೂರು ತಾಲೂಕಿನಲ್ಲಿ ಕೃಷ್ಣ ನದಿ ಹಾಗೂ ಬಸವಸಾಗರ (ನಾರಾಯಣಪುರ) ಅಣೆಕಟ್ಟು ಇದ್ದರೂ ಕೂಡ ಜನರಿಗೆ ಕುಡಿಯಲು ನೀರು ಸಿಗದಿರುವುದು ಅತ್ಯಂತ ವಿಷಾದಕರ ಸಂಗತಿ ಎಂದು ಶಾಸಕ ವಜ್ಜಲ್ ಆಕ್ರೋಶ ವ್ಯಕ್ತಪಡಿಸಿದರು. “ನಮ್ಮ ಕ್ಷೇತ್ರದ ಪಕ್ಕದಲ್ಲೇ ಕೃಷ್ಣ ನದಿ ಹರಿಯುತ್ತಿದ್ದರೂ ಕುಡಿಯುವ ನೀರಿನ ಕೊರತೆಯಿಂದ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ಇದು ಆಡಳಿತಾತ್ಮಕ ವೈಫಲ್ಯವೇ ಹೊರತು ನೀರಿನ ಕೊರತೆ ಅಲ್ಲ” ಎಂದು ಹೇಳಿದರು.
ಈ ಸಮಸ್ಯೆಯ ಕುರಿತು ಪ್ರತಿ ಬಾರಿ ಅಧಿವೇಶನದಲ್ಲಿ ಪ್ರಶ್ನೆ ಕೇಳಿದಾಗಲೂ ಸರ್ಕಾರದಿಂದ ಅದೇ ರೀತಿಯ ಉತ್ತರಗಳು ಮಾತ್ರ ಬರುತ್ತಿವೆ. ಆದರೆ ನೆಲಮಟ್ಟದಲ್ಲಿ ಸಮಸ್ಯೆ ಮಾತ್ರ ಹಾಗೆಯೇ ಮುಂದುವರಿದಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ಕುಡಿಯುವ ನೀರಿನ ಸಮಸ್ಯೆ ಜನಜೀವನದ ಮೂಲಭೂತ ಅಗತ್ಯವಾಗಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.
ಸರ್ಕಾರ ನಿರ್ಲಕ್ಷ್ಯ ತೋರದೆ ತಕ್ಷಣವೇ ಲಿಂಗಸೂಗೂರು ಕ್ಷೇತ್ರದ ನಗರ ಹಾಗೂ ಗ್ರಾಮೀಣ ಪ್ರದೇಶಗಳಿಗೆ ಶಾಶ್ವತ ಕುಡಿಯುವ ನೀರಿನ ಯೋಜನೆಗಳನ್ನು ಜಾರಿಗೊಳಿಸಬೇಕು. ಕೃಷ್ಣ ನದಿಯ ನೀರನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಜನರಿಗೆ ನಿರಂತರ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಮಾನಪ್ಪ ವಜ್ಜಲ್ ಅವರು ಸರ್ಕಾರದ ಮೇಲೆ ಒತ್ತಾಯಿಸಿದರು.

