ಬೆಂಗಳೂರು: ಆಂಧ್ರಪ್ರದೇಶ ಮಾಹಿತಿ ಆಯೋಗದ ಮುಖ್ಯ ಮಾಹಿತಿ ಆಯುಕ್ತರಾದ ವಜ್ಜಾ ಶ್ರೀನಿವಾಸ ರಾವ್ ನೇತೃತ್ವದ ನಿಯೋಗವು ಸೋಮವಾರ ಬೆಂಗಳೂರಿನ ಕರ್ನಾಟಕ ಮಾಹಿತಿ ಆಯೋಗಕ್ಕೆ ಭೇಟಿ ನೀಡಿತು.
ಈ ಸಂದರ್ಭದಲ್ಲಿ ನಿಯೋಗವು ಕರ್ನಾಟಕ ಮಾಹಿತಿ ಆಯೋಗದ ದೈನಂದಿನ ಕಾರ್ಯಕಲಾಪಗಳು, ವಿಚಾರಣೆ ನಡೆಸುವ ವಿಧಾನ ಹಾಗೂ ಮಾಹಿತಿ ಹಕ್ಕು ಕಾಯ್ದೆಯ ಪರಿಣಾಮಕಾರಿ ಅನುಷ್ಠಾನದ ಬಗ್ಗೆ ವೀಕ್ಷಣೆ ನಡೆಸಿತು. ನಂತರ ಉಭಯ ರಾಜ್ಯಗಳ ಆಯುಕ್ತರ ನಡುವೆ ಆಡಳಿತಾತ್ಮಕ ಸುಧಾರಣೆ ಮತ್ತು ವಿಚಾರಣೆಗಳ ವಿಲೇವಾರಿ ಕುರಿತು ಸುದೀರ್ಘ ವಿಚಾರ ವಿನಿಮಯ ನಡೆಯಿತು.
ಈ ಸಭೆಯಲ್ಲಿ ಕರ್ನಾಟಕ ರಾಜ್ಯ ಮುಖ್ಯ ಮಾಹಿತಿ ಆಯುಕ್ತರಾದ ರಾಮನ್ ಕೆ ಹಾಗೂ ಇತರೆ ಮಾಹಿತಿ ಆಯುಕ್ತರು ಉಪಸ್ಥಿತರಿದ್ದು, ಆಂಧ್ರಪ್ರದೇಶದ ನಿಯೋಗದೊಂದಿಗೆ ತಮ್ಮ ಅನುಭವಗಳನ್ನು ಹಂಚಿಕೊಂಡರು. ಪರಸ್ಪರ ರಾಜ್ಯಗಳ ಕಾರ್ಯವೈಖರಿಯನ್ನು ಅರ್ಥೈಸಿಕೊಳ್ಳುವ ಮೂಲಕ ಸಾರ್ವಜನಿಕರಿಗೆ ತ್ವರಿತವಾಗಿ ಮಾಹಿತಿ ತಲುಪಿಸುವ ನಿಟ್ಟಿನಲ್ಲಿ ಈ ಭೇಟಿ ಸಹಕಾರಿಯಾಗಿದೆ ಎಂದು ತಿಳಿಸಲಾಯಿತು.

